ಸ್ಪರ್ಶ ೧೯೯೯ರ ಒಂದು ಕನ್ನಡ ಪ್ರಣಯಪ್ರಧಾನ ಚಲನಚಿತ್ರ. ಇದನ್ನು ಸುನೀಲ್ ಕುಮಾರ್ ದೇಸಾಯಿ ಬರೆದು ನಿರ್ದೇಶಿಸಿದರು. ಮುಖ್ಯ ಪಾತ್ರಗಳಲ್ಲಿ ಸುದೀಪ್, ರೇಖಾ ಮತ್ತು ಸುಧಾರಾಣಿ ನಟಿಸಿದ್ದಾರೆ. ನವೀನ್ ಮಯೂರ್, ಸಿಹಿ ಕಹಿ ಚಂದ್ರು, ಕಾಶಿ, ಉಮಾಶ್ರೀ ಮತ್ತು ವಾಣಿಶ್ರೀ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಮಂದಿರಗಳಲ್ಲಿ ೨೩ ಜುಲೈ ೧೯೯೯ರಲ್ಲಿ ಬಿಡುಗಡೆಯಾದ ಬಳಿಕ, ಈ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ವ್ಯಾಪಕವಾದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ಜುಲೈ ೨೦೦೦ರಲ್ಲಿ ರಾಜ್‍ಕುಮಾರ್ ಅವರ ಅಪಹರಣವಾದ ನಂತರ ಈ ಚಿತ್ರದ ಪ್ರದರ್ಶನಗಳನ್ನು ಬಂದ್ ಕಾರಣದಿಂದ ನಿಲ್ಲಿಸಬೇಕಾಯಿತು. ಇದರಿಂದ ಚಿತ್ರದ ಗಳಿಕೆ ಮೇಲೆ ಪ್ರಭಾವವಾಯಿತು. ಸಾಮಾನ್ಯ ಸ್ಥಿತಿಗೆ ಮರಳಿದ ನಂತರ, ಈ ಚಲನಚಿತ್ರವು ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ್ನು ಪೂರೈಸಿತು. == ಕಥಾವಸ್ತು == ಸುದೀಪ್ ಒಬ್ಬ ಚಲನಚಿತ್ರ ನಟ ಮತ್ತು ರೂಪದರ್ಶಿಯಾಗಿರುತ್ತಾನೆ. ಊಟಿಯಲ್ಲಿ ಒಂದು ಚಿತ್ರದ ಚಿತ್ರೀಕರಣದ ವೇಳೆ ಅವನು ಸುಮಾಳನ್ನು (ರೇಖಾ) ಪ್ರೀತಿಸತೊಡಗುತ್ತಾನೆ. ಅವರು ಒಬ್ಬರನ್ನೊಬ್ಬರು ಭೇಟಿಯಾಗಿ ತಮ್ಮ ಆಶಯಗಳನ್ನು ಹಂಚಿಕೊಳ್ಳುತ್ತಾರೆ. ಸುದೀಪ್ ಸುಮಾಳ ಕುಟುಂಬವನ್ನು ಭೇಟಿಯಾಗುತ್ತಾನೆ. ಕೆಲವು ಘಟನೆಗಳು ಸುದೀಪ್‍ಗೆ ಯಾರು ತಪ್ಪುಗಳನ್ನು ಮಾಡುತ್ತಾರೊ ಅವರೇ ಸ್ವತಃ ಅದನ್ನು ಸರಿಪಡಿಸಿ ಕ್ಷಮೆ ಕೇಳಬೇಕು ಎಂದು ಕಲಿಸುತ್ತವೆ. ಸುದೀಪ್ ತನ್ನ ಪ್ರೇಮಿಯನ್ನು ಊಟಿ ರೈಲು ನಿಲ್ದಾಣದಲ್ಲಿ ಬೀಳ್ಕೊಡಲು ಅವಸರಿಸುತ್ತಿರುವಾಗ, ಆಕಸ್ಮಿಕವಾಗಿ ಒಬ್ಬ ಅಪರಿಚಿತ ಯುವತಿ ರಾಧಾಗೆ (ಸುಧಾರಾಣಿ) ಡಿಕ್ಕಿ ಹೊಡೆದು ಅವಳು ಚಲಿಸುತ್ತಿರುವ ಟ್ರೇನಿನ ಕೆಳಗೆ ಸಿಲುಕುತ್ತಾಳೆ. ಅವಳಿಗೆ ಡಿಕ್ಕಿ ಹೊಡೆದದ್ದು ಯಾರು ಎಂಬುದನ್ನು ರಾಧಾ ನೋಡುವುದಿಲ್ಲ, ಆದರೆ ಅವನು ಧರಿಸಿರುವ ಜ್ಯಾಕೆಟ್‍ನ್ನು ಕ್ಷಣಿಕವಾಗಿ ನೋಡಿರುತ್ತಾಳೆ. ಈ ಅಪಘಾತದಿಂದ ಅವಳು ಕಾಲು, ಜೊತೆಗೆ ತನ್ನ ನಿಶ್ಚಿತ ವರನ ಪ್ರೀತಿಯನ್ನು ಕಳೆದುಕೊಳ್ಳುತ್ತಾಳೆ. ಸುದೀಪ್ ಅಪಘಾತ ಸ್ಥಳಕ್ಕೆ ನುಗ್ಗಿ ಅವಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾನೆ. ಅವನು ಅವಳ ಆರೈಕೆ ಮಾಡುತ್ತಾನೆ, ಆದರೆ ರಾಧಾ ಮತ್ತು ಸುಮಾ ಇಬ್ಬರಿಗೂ ತಾನು ಅಪಘಾತಕ್ಕೆ ಕಾರಣನಾಗಿದ್ದೆ ಎಂದು ಹೇಳುವುದಿಲ್ಲ. ಪರಿಣಾಮಗಳನ್ನು ತಪ್ಪಿಸಿಕೊಳ್ಳಲು, ಸುದೀಪ್ ರಾಧಾಳನ್ನು ಮದುವೆಯಾಗುವ ಪ್ರಸ್ತಾಪವಿಡುತ್ತಾನೆ. ಅವನ ನಿರ್ಧಾರದ ಹಠಾತ್ ಬದಲಾವಣೆಯಿಂದ ಸುಮಾ ನೊಂದುಕೊಂಡರೂ ಅವನ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾಳೆ. ರಾಧಾ ಕೂಡ ಅವನ ಪ್ರಸ್ತಾಪವನ್ನು ಒಪ್ಪಿಕೊಳ್ಳುತ್ತಾಳೆ, ಆದರೆ ತನಗೆ ಡಿಕ್ಕಿ ಹೊಡೆದ ವ್ಯಕ್ತಿಯನ್ನು ಹುಡುಕುವುದು ಮುಂದುವರಿಸುತ್ತಾಳೆ. ಆದರೂ, ಹೇಗೆ ಸತ್ಯಗಳು ಪ್ರಕಟವಾಗುತ್ತವೆ ಎಂಬುದು ಉಳಿದ ಕಥೆಯಾಗಿದೆ. == ಪಾತ್ರವರ್ಗ == == ತಯಾರಿಕೆ == ಈ ಚಿತ್ರದ ಮೊದಲು ಸುದೀಪ್ ಕೆಲವು ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸುದೀಪ್‍ನ ತಂದೆ ಸರೋವರ್ ಸಂಜೀವ್ ಸ್ಪರ್ಶ ವನ್ನು ನಿರ್ದೇಶಿಸಲು ಸುನೀಲ್ ಕುಮಾರ್ ದೇಸಾಯಿಯವರನ್ನು ಒಪ್ಪಿಸಿದರು. ಸಂಜೀವ್ ಸರೋವರ್ ಪ್ರೊಡಕ್ಷನ್ಸ್ ಲಾಂಛನದಡಿ ಈ ಚಿತ್ರವನ್ನು ನಿರ್ಮಾಣ ಮಾಡಿದರು. ಚಿತ್ರೀಕರಣವು ೯೯ ದಿನಗಳ ಅವಧಿಯಲ್ಲಿ ಬೆಂಗಳೂರು, ಹೈದರಾಬಾದ್, ದಾರ್ಜೀಲಿಂಗ್, ಊಟಿ, ಕುಶಾಲ್‍ನಗರ ಮತ್ತು ಚಿಕ್ಕಮಗಳೂರಿನಲ್ಲಿ ನಡೆಯಿತು. == ಧ್ವನಿವಾಹಿನಿ == ಹಂಸಲೇಖ ಚಿತ್ರಕ್ಕೆ ಸಂಗೀತ ನೀಡಿದರು. ಹಾಡುಗಳ ಸಾಹಿತ್ಯವನ್ನು ಹಂಸಲೇಖ, ಶ್ಯಾಮಸುಂದರ ಕುಲಕರ್ಣಿ, ಕೆ. ಕಲ್ಯಾಣ್, ಇಟಗಿ ಈರಣ್ಣ, ದೊಡ್ಡರಂಗೇಗೌಡ ಮತ್ತು ಆರ್.ಎನ್.ಜಯಗೋಪಾಲ್ ಬರೆದರು. ಧ್ವನಿಸುರುಳಿ ಸಂಗ್ರಹದಲ್ಲಿ ಎಂಟು ಹಾಡುಗಳಿದ್ದು ಇದನ್ನು ಆಕಾಶ್ ಆಡಿಯೋ ವಿತರಿಸಿತು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == ೨೦೦೦-೦೧ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ಗೀತಸಾಹಿತಿ — ಇಟಗಿ ಈರಣ್ಣ ೪೮ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ ಅತ್ಯುತ್ತಮ ಚಲನಚಿತ್ರ ಅತ್ಯುತ್ತಮ ನಿರ್ದೇಶಕ — ಸುನೀಲ್ ಕುಮಾರ್ ದೇಸಾಯಿ ಅತ್ಯುತ್ತಮ ನಟಿ — ಸುಧಾರಾಣಿ == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == @ ಐ ಎಮ್ ಡಿ ಬಿ